ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪ.ಪೂ. ಕಾಲೇಜಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ 2026-27 ನೇ ಶೈಕ್ಷಣಿಕ ವರ್ಷ ಆರಂಭದ ಪೂರ್ವಭಾವಿಯಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಸಂಸ್ಥೆಯು 8 ವರ್ಷಗಳನ್ನು ಪೂರೈಸಿ 9ನೇ ವರ್ಷದೆಡೆಗೆ ಸಾಗುತ್ತಿದೆ. ಇದುವರೆಗಿನ ಸಂಸ್ಥೆಯ ಪಯಣದಲ್ಲಿ ಉತ್ತಮವಾದ ಫಲಿತಾಂಶವನ್ನು ಸಂಸ್ಥೆ ನೀಡುತ್ತಾ ಬಂದಿದೆ. ಇದರ ಪ್ರತಿಫಲವಾಗಿ ಸಂಸ್ಥೆಯ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಸಂತೋಷದ ವಿಷಯ. ಮುಂದಿನ ದಶಮಾನೋತ್ಸವದ ಸಂದರ್ಭದಲ್ಲಿ ಸಂಸ್ಥೆ ಇನ್ನಷ್ಟು ದಾಖಲೆಯ ಫಲಿತಾಂಶಗಳನ್ನು ಗಳಿಸುವ ನೆಲೆಯಲ್ಲಿ ಅನೇಕ ಹೊಸ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿಕೊಂಡಿದೆ. ಆದ್ದರಿಂದ ಹೊಸ ನಿಯಮಗಳಿಗೆ ವಿದ್ಯಾರ್ಥಿಗಳು ಮತ್ತು ಪೋ?ಕರು ಪೂರಕವಾಗಿ ಸಹಕರಿಸಬೇಕು ಎಂದು ಹೇಳಿದರು.



ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಮತ್ತು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆ ಮತ್ತು ಪೋಷಕರು ಜೊತೆಯಾಗಿ ಕೈ ಸೇರಿಸಬೇಕು. ಕೇವಲ ಶಿಕ್ಷಣ ಸಂಸ್ಥೆಯಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಕಾಲೇಜಿನ ನಿಯಮ ಮತ್ತು ವ್ಯವಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಪೋ?ಕರ ಜವಾಬ್ದಾರಿ ಆಗಿರುತ್ತದೆ. ಎರಡು ವರ್ಷಗಳ ವಿದ್ಯಾಭ್ಯಾಸದಲ್ಲಿ ಅನಗತ್ಯ ಚಟುವಟಿಕೆಗಳನ್ನು ತೊರೆದು ಶಿಕ್ಷಣದ ದೀಕ್ಷೆ ತೊಟ್ಟು ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಒಳ್ಳೆಯ ಫಲಿತಾಂಶವನ್ನು ಪಡೆಯಲು ಸಾಧ್ಯ. ಆ ಮೂಲಕ ನಿಮ್ಮ ಅಪೇಕ್ಷಿತ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಸಾಧ್ಯ ಎಂದು ಹೇಳಿದರು. ಇದರ ಜೊತೆಗೆ ಕಾಲೇಜು ಮತ್ತು ಹಾಸ್ಟೆಲ್ನ ನಿಯಮಗಳ ಕುರಿತಂತೆ ಮಾತನಾಡಿದರು.
ಆ ಬಳಿಕ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಮಂಜುನಾಥ ಚಾವಡಿ ಮಾತನಾಡಿ ಈ ವರ್ಷದ ಸ್ಪರ್ಧಾತ್ಮಕ ಪರೀಕ್ಷೆಗಳ ಯೋಜನೆಯನ್ನು ವಿವರವಾಗಿ ಹೇಳಿದರು. ಉಪನ್ಯಾಸಕ ಸುನಿಲ್ ಪಲ್ಲಜಲು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳ ಪೋಷಕರು ಮತ್ತು ಉಪನ್ಯಾಸಕರ ಸಂವಾದ ಕಾರ್ಯಕ್ರಮ ನಡೆಯಿತು.


